Spread the love

ಧಾರವಾಡ : ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಇದೆ, ಶಿಕ್ಷಕರಾದವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ಇರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಕರ್ನಾಟಕ ಕಲಾ ಕಾಲೇಜಿನ ಫ್ಯಾರೇನ್ ಸಭಾಂಗಣದಲ್ಲಿ ಕಲಾ ಮತ್ತು ವಾಣಿಜ್ಯ ವಿಷಯದ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ಪಿಯುಸಿ ಹಂತ ಜೀವನದಲ್ಲಿ ಬಹಳ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿಗಳು ಮನಸ್ಸು ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಬೇಕು. ಸತತ ಅಧ್ಯಯನದಿಂದ ಸ್ವಂತ ಆಲೋಚನೆ ಮಾಡುವ ಶಕ್ತಿ ಬೆಳೆಯುತ್ತದೆ ಎಂದ ಅವರು ರಾಜ್ಯದಲ್ಲೇ ಕರ್ನಾಟಕ ಕಾಲೇಜು ಖ್ಯಾತಿಯನ್ನು ಹೊಂದಿದ ಶಿಕ್ಷಣ ಸಂಸ್ಥೆ ಆಗಿದ್ದು ಇಲ್ಲಿ ಅನೇಕ ವಿವಿಧ ತರಹದ ವಿಷಯಗಳನ್ನು ಲಭ್ಯವಿರುವದು ವಿಶೇಷ ಎಂದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪಿಯುಸಿ ಹಂತದಿಂದಲೇ ತಯಾರಿ ನಡೆಸಲು ಸೂಕ್ತ ಎಂದರು. ಕರ್ನಾಟಕ ಕಾಲೇಜಿನಲ್ಲಿ ಪರಿಣತಿ ಹೊಂದಿದ ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು. ಪ್ರಸ್ತುತ ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಿ, ಜೀವನದಲ್ಲಿ ಯೋಗ, ಧ್ಯಾನ, ನಿಯಮಿತ ವ್ಯಾಯಾಮ ಗಳನ್ನು ರೂಪಿಸಿಕೊಳ್ಳಿ ಎಂದರು.

ಮುಖ್ಯ ಅತಿಥಿಗಳಾಗಿ ಧಾರವಾಡ ಪಶ್ಚಿಮ ವಿಭಾಗದ ರಸ್ತೆ ಸಾರಿಗೆ ಹಿರಿಯ ಪ್ರಾದೇಶಿಕ ಆಯುಕ್ತರಾದ ಭಿಮನಗೌಡ ಪಾಟೀಲ ಮಾತನಾಡಿ. ಸ್ಪರ್ಧಾತ್ಮಕ ಕ್ಷೇತ್ರಕ್ಕೆ ತಕ್ಕಂತೆ ಪೂರ್ವತಯಾರಿ ಅಧ್ಯಯನ ಮಾಡಿ ಎಂದ ಅವರು ಇಂದಿನ ಯುವಕರು ರಸ್ತೆ ಸುರಕ್ಷಿತಾ ನಿಯಮಗಳನ್ನು ಪಾಲಿಸಬೇಕು. ದ್ವಿಚಕ್ರ ವಾಹನ ಕಾರು ಚಲಾಯಿಸುವ ವೇಳೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು.

ಧಾರವಾಡ ಪೂರ್ವ ವಲಯದ ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿ…ಪರೀಕ್ಷೆ ಎದುರಿಸಲು ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದ ಅವರು ಉನ್ನತ ಧ್ಯೇಯ ವಿಚಾರಗಳನ್ನು ಇಟ್ಟುಕೊಂಡು ಮುನ್ನುಗ್ಗಿ ಎಂದರು.

ರಾಜ್ಯಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ ಹುಲ್ಲನ್ನವರ ಮಾತನಾಡಿ….ವಿದ್ಯಾರ್ಥಿಗಳು ಮಹತ್ವಕಾಂಕ್ಷೆಯನ್ನು ಹೊಂದಿರಬೇಕು. ಸತತ ಅಧ್ಯಯನ ಪರಿಶ್ರಮ ಬಹಳ ಮುಖ್ಯ ಎಂದರು ಅಪರ್ಪಣಾ ಮನೋಭಾವ, ನಿರ್ದಿಷ್ಟ ಗುರಿ, ಪ್ರಾಮಾಣಿಕತೆಯನ್ನು ವಿದ್ಯಾರ್ಥಿ ದಿಸೆಯಲ್ಲಿ ರೂಪಿಸಿಕೊಳ್ಳಬೇಕು ಎಂದರು. ಜೀವನದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸುವ ಪಿಯುಸಿ ಮಹತ್ವದ ಹಂತವಾಗಿದೆ ಎಂದರು. ಸಮಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಮಾತನಾಡಿ….ಮನಸ್ಸನ್ನು ನಿಯಂತ್ರಣ ಇಟ್ಟುಕೊಳ್ಳಬೇಕು, ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ವಿದ್ಯಾರ್ಥಿಗಳು ಮೌಲ್ಯಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಬೆಳೆಸಿ ಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸರಕಾರಿ ಸೇವೆಯಲ್ಲಿ ನೇಮಕಾತಿ ಹೊಂದಿದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಕನ್ಯಾ ಕಲ್ಲೂರ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ವಿಭಾಗದ ಸಂಯೋಜಕ ಡಾ. ಮುಕುಂದ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ಮತ್ತು ವಾಣಿಜ್ಯ ವಿಷಯದ ದ್ವೀತಿಯ ಪಿಯುಸಿ ಉಪನ್ಯಾಸಕರು, ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.

ಕರ್ನಾಟಕ ಕಾಲೇಜಿನ ಫ್ಯಾರೇನ್ ಸಭಾಂಗಣದಲ್ಲಿ ಆಯೋಜಿಸಿದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಡಾ.ಎಂ.ಬಿ.ದಳಪತಿ ಮಾತನಾಡಿದರು.